20 ಗಂಟೆಗಳ ನಾನ್ಸ್ಟಾಪ್ ಯಕ್ಷಗಾನ
ಲೇಖಕರು : ಎ.ಕೃಷ್ಣ ಭಟ್, ಮಂಗಳೂರು
ಮ೦ಗಳವಾರ, ನವ೦ಬರ್ 5 , 2013
|
ಬರೋಬ್ಬರಿ 20 ಗಂಟೆಗಳ ನಾನ್ಸ್ಟಾಪ್ ಯಕ್ಷಗಾನ. 1215 ನಿಮಿಷಗಳ ಅವಿರತ ಹೆಜ್ಜೆ-ಗೆಜ್ಜೆ, ಚೆಂಡೆ-ಮದ್ದಳೆಗಳ ಅನುರಣನ. ಇದು ಯಕ್ಷಗಾನ ಲೋಕದ ಮಹಾ ಉತ್ಸವ ಎಂದೇ ಪರಿಗಣಿತವಾಗಿರುವ ಸಂಪಾಜೆ ಯಕ್ಷೋತ್ಸವ 2013ರ ರಸದೌತಣ.
ಶನಿವಾರ ಸಂಜೆ ಸರಿಯಾಗಿ 5 ಗಂಟೆಗೆ- ಶ್ರೀ ಗುರುಗಣಾಪತಯೇ ನಮಃ ಎಂದು ಆರಂಭಗೊಂಡ ಯಕ್ಷ ಸಂಭ್ರಮಕ್ಕೆ ಮಂಗಳ ಹಾಡಿದ್ದು ಭಾನುವಾರ 1.15ಕ್ಕೆ. ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ಕಲ್ಲುಗಂಡಿ ಶಾಲಾ ವಠಾರದಲ್ಲಿ ನಡೆದದ್ದು ಕಾಳಿದಾಸ -ವೀರಚಂದ್ರಧ್ವಜ-ತ್ರಿಪುರ ಮಥನ ಮತ್ತು ಮತ್ಸ್ಯಾವತಾರ ಪ್ರಸಂಗಗಳ ಪ್ರದರ್ಶನ. 10 ಮಂದಿ ಸುಪ್ರಸಿದ್ಧ ಭಾಗವತರು, 12 ಮಂದಿ ಚೆಂಡೆ, ಮದ್ದಳೆ, ಗಾರುಡಿಗರು 15 ಬಣ್ಣದ ವೇಷಗಳ ಅಬ್ಬರದ ಹೋರು ಮತ್ತು ತೆಂಕು ಬಡಗಿನ 77 ಪ್ರಖ್ಯಾತ ಕಲಾವಿದರು ಕಟ್ಟಿದ ಯಕ್ಷ ವೈಭವ ಬಲು ಜೋರು. ಯಕ್ಷಗಾನವನ್ನು ಕಾಲಮಿತಿಗೊಳಪಡಿಸುವ ಚಚೆರ್ಯ ನಡುವೆ ಕಾಲಾತೀತವಾಗಿ ಸಮಯದ ಪರಿವೇ ಇಲ್ಲದೆ ನಡೆದ ಈ ಯಕ್ಷಸಮಾರಾಧನೆಯನ್ನು ಕನಿಷ್ಠ 30 ಸಾವಿರಕ್ಕೂ ಅಧಿಕ ಪ್ರೇಕ್ಷಕರು ನೇರವಾಗಿ ಆಸ್ವಾದಿಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಯಕ್ಷಗಾನ ರಸಿಕರಲ್ಲದೆ ಉ.ಕ., ಶಿವಮೊಗ್ಗ, ಕೊಡಗು, ಮೈಸೂರು, ಮತ್ತು ಬೆಂಗಳೂರಿನ ಪ್ರೇಕ್ಷಕರು ಆಗಮಿಸಿದ್ದು ವಿಶೇಷ.
ಯಾವ ಗಾಳಿ, ಮಳೆಗೂ ಕದಲದ ಬೃಹತ್ ಪೆಂಡಾಲಿನಲ್ಲಿ ಏಕಕಾಲದಲ್ಲಿ ಏಳು ಸಾವಿರದಷ್ಟು ಪ್ರೇಕ್ಷಕರಿಗೆ ಕುಳಿತುಕೊಳ್ಳುವ ಅವಕಾಶ. ಬೃಹತ್ ಪರದೆಗಳಲ್ಲಿ(ಸ್ಕ್ರೀನ್) ನೇರ ಪ್ರಸಾರ, ಯಕ್ಷಭೋಜನದ ಜತೆಗೆ ಶನಿವಾರ ಸಂಜೆಯಿಂದ ಭಾನುವಾರ ಮಧ್ಯಾಹದ ತನಕ ಹೊತ್ತು ಹೊತ್ತಿಗೆ ಉಚಿತ ಊಟ, ತಿಂಡಿ ವ್ಯವಸ್ಥೆ.
ಭಾಗವತಿಕೆ ಜುಗಲ್- ತಿಗಲ್ಬಂದಿ: ಸತೀಶ್ಪಟ್ಲ ಮತ್ತು ರವಿಚಂದ್ರ ಕನ್ನಡಿಕಟ್ಟೆ ಸೊಬಗಿನ ಹಾಡಿನ ಜುಗಲ್ಬಂದಿ, ಹೊಸಮೂಲೆ ಮತ್ತು ಸಿರಿಬಾಗಿಲು ವೀರಾವೇಶದದ್ವಂದ್ವ, ಬಲಿಪ- ಅಮ್ಮಣ್ಣಾಯ-ಹೊಳ್ಳರ ಅಮೋಘ ತಿಗಲ್ಬಂದಿ ಹೊಸಲೋಕ ತೆರೆಯಿತು.
ಹಿರಿ-ಕಿರಿಯ ಸಮಾಗಮ: ಚಿಟ್ಟಾಣಿ, ಯಾಜಿ, ಮಂಟಪ, ಬಡಗಿನ ಸೊಬಗು ಮೆರೆದರೆ, ತೆಂಕುತಿಟ್ಟಿನ ಕಲಾವಿದರು, ಪುಂಡು ವೇಷಗಳ ಅಬ್ಬರ ಸಭಾಂಗಣವನ್ನೇ ನಡುಗಿಸಿತು. ದಿವಾಕರ ರೈ ಸಂಪಾಜೆ, ಚಂದ್ರಶೇಖರ ಧಮರ್ಸ್ಥಳ, ರಾಧಾಕೃಷ್ಣ ಶೆಟ್ಟಿ ಏಕಕಾಲದಲ್ಲಿ ವಿಜೃಂಭಿಸಿದರು. ಮತ್ಸ್ಯಾವತಾರ ಪ್ರಸಂಗದಲ್ಲಿ ನಿಡ್ಲೆ ಗೋವಿಂದ ಭಟ್ ಮತ್ತು ಸುಬ್ರಾಯ ಹೊಳ್ಳ ಕಾಸರಗೋಡು ಸಮಾಸುರರಾಗಿ ಜಿದ್ದಿಗೆ ಬಿದ್ದವರಂತೆ ಕುಣಿದು ಹುಚ್ಚೆಬ್ಬಿಸಿದರು.
ಜಗಳವಿಲ್ಲದ ಜಿಜ್ಞಾಸೆ: ಇತ್ತೀಚಿನ ದಿನಗಳಲ್ಲಿ ಕಲಾವಿದರ ನಡುವಿನ ವಾದಗಳು ವಾಗ್ಯುದ್ಧ, ವೈಯಕ್ತಿಕ ನಿಂದೆಗಳಾಗುತ್ತಿರುವುದಕ್ಕೆ ವ್ಯತಿರಿಕ್ತವಾಗಿ ಚಾರ್ವಾಕ (ಸಿದ್ಧಕಟ್ಟೆ) ಮತ್ತು ತಾರಾಮಣಿ (ಅಂಬಾಪ್ರಸಾದ್) ನಡುವಿನ ಪತಿ-ಪತ್ನಿ ಸಂಬಂಧ ಮತ್ಸ್ಯಾವತಾರ ಪ್ರಸಂಗದಲ್ಲಿ ಖ್ಯಾತಿ (ಶಶಿಕಾಂತ ಶೆಟ್ಟಿ) ಮತ್ತು ವಿಷ್ಣು (ತಾರಾನಾಥ ವರ್ಕಾಡಿ) ಹಾಗೂ ಭೃಗು (ಸುಣ್ಣಂಬಳ) ವಿಷ್ಣು (ವರ್ಕಾಡಿ) ನಡುವಿನ ಧರ್ಮಸೂಕ್ಷ್ಮ ಚರ್ಚೆಗಳು ನಿಜಕ್ಕೂ ಹೊಸ ಲೋಕ ತೋರಿದವು.
ಎರಡಕ್ಕೆರಡು: ಕಾಳಿದಾಸ ಮತ್ತು ವೀರಚಂದ್ರಧ್ವಜ ಪ್ರಸಂಗಗಳ ಒಂದಿಷ್ಟು ನಿಧಾನಿಕ ನಡೆಯನ್ನು ತ್ರಿಪುರ ಮಥನದ ಅಂತ್ಯ ಮತ್ತು ಮತ್ಸ್ಯಾವತಾರದ ಮುಚ್ಚಿ ಹಾಕಿತು.
ಕೃಪೆ : http://www.vijaykarnataka.com
|
|
|